Sabitlenmiş Tweet

ಆಗಿದ್ದೆಲ್ಲವೂ ಒಳ್ಳೆಯದೇ ಆಗಿದೆ
ಆಗುವುದೆಲ್ಲವೂ ಒಳ್ಳೆಯದೇ ಆಗಲಿದೆ,
ಆಗಬಾರದ್ದು ಆಗಿದ್ದಾದರೂ ಏನು?
ಆಗಿಸಿದ್ದೆಲ್ಲವೂ ಆ ಕೃಷ್ಣನಲ್ಲವೇನು!
ಆಗಬಾರದು ಎಂದುಕೊಂಡಿದ್ದು
ಆಗುವುದೀಗ ಒಳ್ಳೆಯದಿರಬಹುದು,
ಆಗ ಬರದು ಅಂದುಕೊಂಡಿದ್ದು
ಈಗ ಬಂದು ಒಳ್ಳೆಯದಾಗಬಹುದು;
ಹಣವಿರದಿರೇನು ಗುಣವಿಹುದಲ್ಲ,
ದನ ಕಾಯುವವನೇ ಧನ ಕಾಯಿಸಬಲ್ಲ!
ಆಗಿದ್ದಾಗಲಿ..
ಮುಂದಕ್ಕೆ ಹೋ'ಗೋ, ಪಾಲ'ಕನಿಹನು;
ಯಾರನ್ನೂ ನೆಚ್ಚಿಕೊಳ್ಳಬೇಡ,
ಯಾರನ್ನೂ ಹಚ್ಚಿಕೊಳ್ಳಬೇಡ,
ದ್ರೌಪದಿಯನ್ನು ಒಮ್ಮೆ ನೆನಪಿಸಿಕೋ..
ದುಶ್ಯಾಸನ ಆಕೆಯ ಸೀರೆ ಸೆಳೆಯುವಾಗ
ಪತಿ ಬಲಭೀಮ ನೆರವಿಗೆ ಧಾವಿಸಲಿಲ್ಲ,
ಪರಾಕ್ರಮಿ ಪಾರ್ಥನೂ ಸಹಾಯಕ್ಕೆ ಬರಲಿಲ್ಲ,
ಧರ್ಮನಿಷ್ಠ ಯುಧಿಷ್ಠಿರನೂ ರಕ್ಷಿಸಲಿಲ್ಲ,
ಕಡೇಪಕ್ಷ ತುಂಬಿದ ಸಭೆಯಲ್ಲಿದ್ದ
ಅತಿರಥ-ಮಹಾರಥಿಗಳೂ
'ಅಯ್ಯೋ ಪಾಪ' ಎಂದು ಮರುಗಲಿಲ್ಲ..
ಸಂಕಷ್ಟದಲ್ಲಿ ಕೊನೆಗೂ
ಅವಳ ಮಾನ ಉಳಿಸಿದ್ದು
ಶ್ರೀಕೃಷ್ಣ ಎಂಬುದ ಮರೆಯಬೇಡ;
'ನನ್ನಿಂದಲೇ ಎಲ್ಲ, ನಾನಿದ್ದರೇನೇ ಎಲ್ಲ'
ಎಂದು ನೀ ಎಂದೂ ಕೊಚ್ಚಿಕೊಳ್ಳಬೇಡ,
ಎಲ್ಲದಕೂ ಕಾರಣನಾ ಶ್ರೀಕೃಷ್ಣ ಪರಮಾತ್ಮನು,
ನೆಪವಷ್ಟೇ ನೀನು, 'ನಾನು';
ಹಾಗಲ್ಲ, ಹೀಗಲ್ಲ, ಆಗೊಲ್ಲ ಎಂಬ ನೆಪವೆಲ್ಲ ಸಲ್ಲ,
ಆಗದೆಂದುಕೊಂಡಿರುವುದ ಕೂಡ ಆಗಿಸಬಲ್ಲ ಆ ಗೊಲ್ಲ;
ಏನಾದರೂ ಸಾಧಿಸಬೇಕೆಂದುಕೊಂಡಾಗ
ನಿದ್ದೆ, ಬಿದ್ದೆ, ಕಣ್ಣು ಒದ್ದೆ ಎಂಬುದೆಲ್ಲ ಇದ್ದಿದ್ದೇ..
ಅದ ಮೀರಿ ಎದ್ದೆ ಎಂದರೆ ನೀ ಗೆದ್ದೆ,
ಇದೂ ಆ ಕೃಷ್ಣ ಕುರುಕ್ಷೇತ್ರದಲಿ ಹೇಳಿದ್ದೇ..
ಬದುಕೆಂಬುದೇ ಒಂದು ಕುರುಕ್ಷೇತ್ರ,
ಧೈರ್ಯವೊಂದೇ ಅದನೆದುರಿಸೋ ಅಸ್ತ್ರ,
ಬಿರುಗಾಳಿಯೇ ಬರಲಿ, ಎದುರಾಳಿ ಯಾರೇ ಇರಲಿ,
ಇರುವುದು ನಿನ್ನೆದುರೇ ಕೃಷ್ಣನಿರುವು ಅಗೋಚರ;
ಜೀವನದ ಹೋರಾಟದಲಿ ಮೆಚ್ಚುಗೆಯ ಉಲಿ ತಾಕುವುದು,
ಹೊಟ್ಟೆಕಿಚ್ಚಿನವರ ಚುಚ್ಚುಮಾತುಗಳ ಉಳಿ ತಾಗುವುದು,
ಎಲ್ಲವನೂ ಸಮನಾಗಿ ಸ್ವೀಕರಿಸುವಗೆ ಒಳಿತಾಗುವುದು;
ಸುಖ-ದುಃಖ ಏನೇ ಇರಲಿ..
ಸಮಯ ಸರಿದುಹೋಗುವುದು;
ಜನರೋ ವಿಚಿತ್ರ, ಅದಕೆ..
ನಾನೊಮ್ಮೆ ಅನುರಾಗಿ, ಮಗದೊಮ್ಮೆ ವಿರಾಗಿ,
ಏನಾದರೂ ನಗುನಗುತ ಸಾಗುತಿಹೆ ಕೃಷ್ಣನಿಗೆ ಶಿರ ಬಾಗಿ..🙏
©#ಕಾಂತೋಕ್ತಿ
#Ravikantha
ಚಿತ್ರ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ 🙏

ಕನ್ನಡ





















